Friday, 7 September 2018

ಶೇ.೨೦ರಷ್ಟು ಮಹಿಳಾ ರಾಜ್ಯದಲ್ಲಿ ಪೊಲೀಸ್ ನೇಮಕ

ಶೇ.೨೦ರಷ್ಟು ಮಹಿಳಾ ರಾಜ್ಯದಲ್ಲಿ ಪೊಲೀಸ್ ನೇಮಕ
ಗೃಹ ಸಚಿವ ಡಾ.ಜಿ.ಪರಮೇಶ್ವರ್ 

100 ತುಮಕೂರು: ರಾಜ್ಯದಲ್ಲಿ ಪ್ರಸ್ತುತ ಮಹಿಳಾ ಪೊಲೀಸ್ ಸಿಬ್ಬಂದಿಯ ಸಂಖ್ಯೆ ಶೇ೫-೬ರಷ್ಟಿದ್ದು,ಇದನ್ನು ಶೇ೨೦ಕ್ಕೆ ಹೆಚ್ಚಿಸುವ ಆಲೋಚನೆ ಇಲಾಖೆಯ ಮುಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲ ಪೊಲೀಸ್ ತರಬೇತಿ ಶಾಲೆ ವತಿಯಿಂದ ಏರ್ಪಡಿಸಿದ್ದ ೯ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಪೊಲೀಸ್ ಇಲಾಖೆಗೆ ಹೆಚ್ಚು ಮಂದಿ ಮಹಿಳೆಯರು ಕೆಲಸಕ್ಕೆ ಸೇರುತ್ತಿದ್ದು, ಈಗಾಗಲೇ ಶೇ. ೫ ರಿಂದ ೬ ರಷ್ಟು ಮಂದಿ ಮಹಿಳೆಯರು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ೨೫೦ಕ್ಕೂ ಹೆಚ್ಚು ಮಂದಿ ಐಪಿಎಸ್ ಅಧಿಕಾರಿಗಳಲ್ಲಿ ೨೫ಕ್ಕೂ ಅಧಿಕ ಮಹಿಳಾ ಐಪಿಎಸ್ ಅಧಿಕಾರಿಗಳಿದ್ದಾರೆ.ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿರುವ ನೀಲಮಣಿ ರಾಜು ಅವರು ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದರು ಮೆಚ್ಚುಗೆ ವ್ಯಕ್ತಪಡಿಸಿದರು.



 ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನಿಯಂತ್ರಣದಲ್ಲಿದ್ದು,ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.ತುಮಕೂರಿನಲ್ಲಿ ಕಳೆದ ೨ ವರ್ಷಗಳಿಂದಲೂ ಮಹಿಳೆಯರೇ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತಿದ್ದು, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ.ಇದು ನಿಜಕ್ಕೂ ಹೆಮ್ಮೆ ಪಡುವಂತಹ ವಿಚಾರ ಎಂದರು.
ಪೊಲೀಸ್ ಇಲಾಖೆ ಮುಂದೆ ದಿನ ೨೪ ಗಂಟೆಯೂ ಸವಾಲುಗಳು ಎದುರಾಗಿರುತ್ತವೆ. ಯಾವ ಸಂದರ್ಭದಲ್ಲಿ ಏನು ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಂಥ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಪೊಲೀಸರು ಸದಾ ಸನ್ನದ್ಧರಾಗಿರಬೇಕು ಎಂದ ಅವರು,ಅನೇಕ ದೊಡ್ಡ ದೊಡ್ಡ ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಕರ್ನಾಟಕ ಪೊಲೀಸರು ಮುಂಚೂಣಿಯಲ್ಲಿದ್ದು, ಇಡೀ ದೇಶದಲ್ಲೇ ಕರ್ನಾಟಕ ಪೊಲೀಸ್ ಪ್ರಖ್ಯಾತವಾಗಿದೆ ಎಂದು ಗೃಹ ಸಚಿವರು ಪೊಲೀಸರ ಕಾರ್ಯವೈಖರಿಯನ್ನು ಪ್ರಶಂಸಿಸಿದರು.
ಕರ್ನಾಟಕ ಪೊಲೀಸರ ಸಮರ್ಥ ಕಾರ್ಯನಿರ್ವಹಣೆಯಿಂದ ಪ್ರಸ್ತುತ ದಿನಗಳಲ್ಲಿ ಅಪರಾಧಗಳು ಕಡಿಮೆಯಾಗಿವೆ. ಮುಂದಿನ ದಿನಗಳಲ್ಲೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ತಹಬದಿಗೆ ತಂದು ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕು.ಯಾವುದೇ ಕಾರಣಕ್ಕೂ ಜನಸಾಮಾನ್ಯರು, ಸಮಾಜವಿದ್ರೋಹಿ ಶಕ್ತಿಗಳು ಕಾನೂನು ಕೈಗೆತ್ತಿಕೊಳ್ಳದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು.ಕಳೆದ ೨೫ ವರ್ಷಗಳ ಹಿಂದೆ ಇದ್ದ ರೀತಿ ಈಗ ಪೊಲೀಸ್ ಇಲಾಖೆ ಇಲ್ಲ. ಹೊಸ ಹೊಸ ಕಾನೂನುಗಳು ಜಾರಿಗೆ ಬಂದಿವೆ. ಅಪರಾಧ ಪ್ರಕರಣಗಳು ಬೇರೆ ಬೇರೆ ರೀತಿಯಲ್ಲಿ ನಡೆಯುತ್ತವೆ. ಹಾಗಾಗಿ ಇಂದಿನ ನವಯುಗಕ್ಕೆ ತಕ್ಕಂತೆ ಎಲ್ಲ ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ನೀಡುವ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಕಿರಿಯ ಪೊಲೀಸರು ನಡೆದು ಕರ್ನಾಟಕಕ್ಕೆ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ತರಬೇಕು ಎಂದು ಕವಿಮಾತು ಹೇಳಿದರು.
ಆರಕ್ಷಕರಾಗಿ ನೇಮಕಗೊಂಡ ಮೇಲೆ ಜನಸಾಮಾನ್ಯರ ಆಸ್ತಿ-ಪಾಸ್ತಿ, ಪ್ರಾಣ ರಕ್ಷಣೆ, ಶೋಷಿತ ವರ್ಗಗಳ ರಕ್ಷಣೆಗೆ ಕಟಿಬದ್ಧರಾಗಿ ಸೇವೆ ಸಲ್ಲಿಸಬೇಕು. ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳು ಎದುರಾಗಬಹುದು ಅದೆಲ್ಲವನ್ನೂ ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತರಬೇತಿ ಪೂರ್ಣಗೊಳಿಸಿದ ಮಹಿಳಾ ಪೊಲೀಸರಿಗೆ ಸಲಹೆ ನೀಡಿದರು.
ತುಮಕೂರು ಜಿಲ್ಲೆಯ ನಾಗರಿಕರು ಸುಸಂಸ್ಕೃತರು, ಕಾನೂನಿಗೆ ಗೌರವ ಕೊಡುವವರು. ಹಾಗಾಗಿ ಈ ಜಿಲ್ಲೆಯಲ್ಲಿ ದೊಡ್ಡ ಅಪರಾಧಗಳು ನಡೆಯುವುದಿಲ್ಲ. ಮೊದಲಿನಿಂದಲೂ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ತೀರಾ ಕಡಿಮೆಯೇ ಇವೆ.ತುಮಕೂರು ಜಿಲ್ಲೆಯ ಪೊಲೀಸರಿಗೆ ೨೫೦ಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದೆ. ನಗರದಲ್ಲಿ ಹೊಸದಾಗಿ ಪೊಲೀಸ್ ಗೃಹಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.ಕೊರಟಗೆರೆಯಲ್ಲಿ ಕೈಗೊಳ್ಳಲಾಗಿರುವ ಕೆಎಸ್‌ಆರ್‌ಪಿ ಘಟಕದ ಕಾಮಗಾರಿ ಇನ್ನೊಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ೧೨೧ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಅಭಿನಂದಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ಡಿಜಿ ಪಿ.ಕೆ. ಗರ್ಗ, ಕೇಂದ್ರ ವಲಯ ಐಜಿಪಿ ದಯಾನಂದ್ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾಗೋಪಿನಾಥ್ ಸ್ವಾಗತಿಸಿದರು. ಅಡಿಷನಲ್ ಎಸ್ಪಿ ಡಾ. ಶೋಭರಾಣಿ ವಂದಿಸಿದರು.  

No comments:

Post a Comment

vishalaprabha 09-02-2019 pages