Sunday, 9 September 2018

ಪ್ರಗತಿ ಪುಸ್ತಕಕ್ಕೆ ಸಿಮೀತವಾಗಬಾರದು: ಡಿಸಿಎಂ ಪರಮೇಶ್ವರ್


ಪ್ರಗತಿ ಪುಸ್ತಕಕ್ಕೆ ಸಿಮೀತವಾಗಬಾರದು: ಡಿಸಿಎಂ ಪರಮೇಶ್ವರ್

ತುಮಕೂರು: ಎಲ್ಲಾ ಇಲಾಖೆಗಳ ಪ್ರಗತಿ ಕೇವಲ ಪುಸ್ತಕಕ್ಕೆ ಸಿಮೀತವಾಗಬಾರದು, ಅದು ವಾಸ್ತವವಾಗಿ ಕಾರ್ಯಗತವಾಗಬೇಕು ಹಾಗೂ ಫಲಾನುಭವಿಗಳಿಗೆ ಸೌಲಭ್ಯ ತಲುಪಬೇಕು ಎಂದು ಡಿಸಿಎಂ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾ  ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಾಗರಿಕರು ಇನ್ನೂ ಜನಪ್ರತಿನಿಧಿಗಳ ಕಚೇರಿ, ಮನೆ ಮುಂದೆ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎಂದರೆ ಆಡಳಿತ ಮಂಕಾಗಿದೆ ಎಂದೇ ಭಾವಿಸಬೇಕಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಕೆಲಸ ಮಾಡಬೇಕು, ಸಿಎಂ ಜನತಾ ದರ್ಶನ, ಸಚಿವ ಭೇಟಿ ಸಂದರ್ಭವೂ ಸೇರಿದಂತೆ ನಾಗರಿಕರು ಜನಪ್ರತಿನಿಧಿಗಳ ಮನೆ ಮುಂದೆ ಬರುವುದು ನಿಲ್ಲಬೇಕಾದರೆ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದರು.



ಅಧಿಕಾರಿಗಳು ಕಾಲಮಿತಿಯೊಳಗೆ ಕಾರ್ಯನಿರ್ವಹಿಸಬೇಕು, ಸಮರ್ಪಕ ಮಾಹಿತಿ ನೀಡದ ಹಾಗೂ ಕಾರ್ಯನಿರ್ವಹಿಸದ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಜಾಗವಿಲ್ಲ, ಮುಂದಿನ ದಿನಗಳಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದ ಸಚಿವರು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳ ಜವಾಬ್ದಾರಿ ಹೆಚ್ಚಿದ್ದು, ಯಾವುದೇ ಇಲಾಖೆ ಪ್ರಗತಿಯಲ್ಲಿ ಕುಂಠಿತವಾದರೆ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದರೆ ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಗಳನ್ನು ನೇರಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಜಿಲ್ಲಾಮಟ್ಟದ ಅಧಿಕಾರಿಗಳು ಸಭೆ, ಕಾರ್ಯಕ್ರಮದ ಹೆಸರಿನಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು, ತಾಲ್ಲೂಕು, ಹೋಬಳಿವಾರು ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಜೊತೆಗೆ ಅಧಿಕಾರಿಗಳ ಭೇಟಿ ಪುಸ್ತಕವನ್ನು ಎಲ್ಲಾ ಇಲಾಖೆಗಳು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನೀಡಿದ ಸೂಚನೆಗಳು ಅ ಪುಸ್ತಕದಲ್ಲಿ ದಾಖಲಾಗಬೇಕು ಮತ್ತು ತಾವು ನೀಡಿದ ಸೂಚನೆಗಳನ್ನು ಕೆಳಹಂತದ ಅಧಿಕಾರಿಗಳು ಪಾಲಿಸಿದ್ದಾರೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ ಕ್ರಮವಹಿಸಬೇಕು, ಪರಿಶೀಲನಾ ವರದಿಯನ್ನು ಕಡ್ಡಾಯವಾಗಿ ಬರೆಯಬೇಕು, ಕನಿಷ್ಠ ನಾಲ್ಕು ತಿಂಗಳಿಗೆ ಒಮ್ಮೆಯಾದರೂ ಪ್ರತಿ ತಾಲ್ಲೂಕಿಗೆ ಭೇಟಿ ನೀಡಬೇಕು ಎಂದು ಸೂಚಿಸಿದ ಸಚಿವರು, ನಾನು ಕೂಡ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದರೆ ಮುಂದಿನ ಪರಿಣಾಮ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಒಂದು ಕಡೆ ಅತೀಯಾದ ಮಳೆ ಮತ್ತೊಂದು ಕಡೆ ಬರ ಆದರೂ ವಾರ್ಷಿಕ ಸರಾಸರಿ ಮಳೆಯಾಗಿದೆ, ಫಸಲು ಬಂದಿಲ್ಲ, ಕೃಷಿ ಇಲಾಖೆ ಹಾಗೂ ಹವಾಮಾನ ಇಲಾಖೆ ಅಧಿಕಾರಿಗಳು ಇಂದು ನೀಡಿರುವ ಅಂಕಿಅಂಶಗಳನ್ನು ನಾವು ಕೇಂದ್ರ ಸರ್ಕಾರಕ್ಕೆ ನೀಡಿದರೆ ಒಂದು ನಯಾಪೈಸೆ ಅನುದಾನ ನೀಡಲ್ಲ, ವಾರ್ಷಿಕ ಸರಾಸರಿ ಮಾಹಿತಿ ನೀಡುವುದನ್ನು ಬಿಟ್ಟು ಮಾಹೆವಾರು ಬಿತ್ತನೆ, ನಷ್ಟ, ಮಳೆ ಪ್ರಮಾಣದ ಮಾಹಿತಿ ನೀಡಿ, ಜಿಲ್ಲೆಯಲ್ಲಿ ೭೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜು ಪಟ್ಟಿ ಸಲ್ಲಿಸಿದ್ದೀರಿ, ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈಗಾಗಲೇ ಅಗ್ರಿ ಆಪ್ ಬಳಸುವಂತೆ ಸೂಚನೆ ನೀಡಿದರೂ ಕಾರ್ಯಗತವಾಗಿಲ್ಲ, ಸ್ಯಾಟಲೈಟ್ ಮೂಲಕ ಕೇಂದ್ರ ಸರ್ಕಾರ ಎಲ್ಲ ಮಾಹಿತಿ ಪಡೆದುಕೊಳ್ಳಲಿದೆ. ೧ ವಾರದೊಳಗೆ ಜಿಲ್ಲೆಯ ಬೆಳೆ ನಷ್ಟ ಮಾಹಿತಿಯನ್ನು ಆಪ್‌ಮೂಲಕ ಅಪ್‌ಡೆಟ್ ಮಾಡುವಂತೆ ಕೃಷಿ, ತೋಟಗಾರಿಕಾ, ರೇಷ್ಮೆ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ವೆಂಕಟರವಣಪ್ಪ ಉಸ್ತುವಾರಿ ಸಚಿವರ ಗಮನ ಸೆಳೆದು, ಅಗತ್ಯವಿರುವ ಕಡೆ ಬೋರ್‌ವೆಲ್ ಕೊರೆದಿದ್ದಾರೆ. ಆದರೆ ೬ ತಿಂಗಳು ಕಳೆದರೂ ಪಂಪು, ಮೋಟಾರ್ ಅಳವಡಿಸಿಲ್ಲ, ಪೈಪ್ ಲೈನ್ ಕಾಮಗಾರಿ ಮಾಡಿಲ್ಲ, ಜನರ ಪರವಾಗಿ ಕೆಲಸ ಮಾಡುವುದು ಬಿಟ್ಟು, ತಾಂತ್ರಿಕ ಸಮಸ್ಯೆ, ಅನುದಾನವಿಲ್ಲ ಎಂದು ಹೇಳಿಕೊಂಡು ಜಾರಿಕೊಳ್ಳುತ್ತಿದ್ದಾರೆ ಅಧಿಕಾರಿಗಳು, ೧ ವಾರದೊಳಗೆ ಪಾವಗಡ ತಾಲ್ಲೂಕಿನಲ್ಲಿ ಬಾಕಿ ಇರುವ ೩೪ ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ಅಳವಡಿಸಬೇಕು, ಪೈಪ್‌ಲೈನ್ ಕಾಮಗಾರಿ ಮಾಡಬೇಕು, ವಿದ್ಯುತ್ ಸಂಪರ್ಕ ಕಲ್ಪಿಸಿ ನಾಗರಿಕರಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಲ್ಲವಾದರೆ ಅಧಿಕಾರಿಗಳಿಗೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ವಾರ್ನಿಂಗ್ ಮಾಡಿದರು.
ಈಗಾಗಲೇ ಒಂದು ಅಂದಾಜಿನ ಪ್ರಕಾರ ಪಾವಗಡ ತಾಲ್ಲೂಕಿನ ೭೪ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಅಧಿಕಾರಿಗಳು ಪರಿಹಾರ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು ಎಂದು ವೆಂಕಟರವಣಪ್ಪ ಸೂಚಿಸಿದರು, ಇದೇ ಪ್ರತಿಕ್ರಿಯಿಸಿದ ಡಿಸಿಎಂ ಪರಮೇಶ್ವರ್ ಪಾವಗಡವನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದೀರಿ, ಸಚಿವರು ಸೀರಿಸ್ ಆಗಿದ್ದಾರೆ, ಆದೇನು ಸರಿಯಾಗಿ ಸಚಿವರನ್ನು ನೋಡಿಕೊಳ್ಳಿ ಎಂದು ಹ್ಯಾಸಚಾಟಕಿ ಹಾರಿಸಿದರು.
ಅರಣ್ಯ ಇಲಾಖಾ ಅಧಿಕಾರಿಗಳಿಗೆ ನೋಟಿಸ್
ಸಮರ್ಪಕವಾಗಿ ಮಾಹಿತಿ ನೀಡಿದ ಅರಣ್ಯ ಇಲಾಖೆ ಸಾಮಾಜಿಕ ವಲಯ ಹಾಗೂ ಕೆಆರ್‌ಡಿಎಲ್ ಅಧಿಕಾರಿಗಳಿಗೆ ಕಾರಣ ನೀಡಿ ಶೋಕಾಸ್ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತಿವಾರು ಹಾಸ್ಟೇಲ್‌ಗೆ ಬ್ರೇಕ್
ಸಮುದಾಯ ಆಧರಿತವಾಗಿ ವಿದ್ಯಾನಿಲಯಗಳನ್ನು ನಿರ್ಮಿಸುವ ಮೂಲಕ ಚಿಕ್ಕ ಮಕ್ಕಳಲ್ಲಿ ಜಾತಿಯತೆಯನ್ನು ನಾವೇ ಹುಟ್ಟು ಹಾಕಿದಂತೆ ಆಗುತ್ತಿದ್ದು, ಜಾತಿವಾರು ಮೈಡ್ ಸೆಟ್ ಮಾಡುತ್ತಿದ್ದೇವಾ ಎಂದು ಪ್ರಶ್ನಿಸಿದ ಸಚಿವ ಪರಮೇಶ್ವರ್, ಸಾಮಾನ್ಯ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಎಲ್ಲಾ ವರ್ಗಗಳ ವಿದ್ಯಾರ್ಥಿಗಳು ಒಂದೇ ಹಾಸ್ಟೇಲ್‌ನಲ್ಲಿ ಇರುವಂತೆ ಮಾಡಬೇಕಿದೆ. ಆರಂಭದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು, ನಂತರದ ದಿನಗಳಲ್ಲಿ ಸರಿಯಾಗಲಿದೆ.  ಜಿ ಲ್ಲಾ ಕೇಂದ್ರದಲ್ಲಿ ರಾಜ್ಯ ಸರ್ಕಾರ ಈ ವಿನೂತ ಯೋಜನೆಗೆ ಪೂರಕವಾಗಿ ಹಾಸ್ಟೇಲ್ ನಿರ್ಮಾಣಕ್ಕೆ ಭೂಮಿ ಗುರುತಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಪಿಎಲ್ ಬರೆ
ಜಿಲ್ಲೆಯಲ್ಲಿ ಸಾಂಖಿಕ ಇಲಾಖೆ ಮಾಹಿತಿಯಂತೆ ಒಟ್ಟು ೬,೪೦,೦೮೧ ಕುಟುಂಬಗಳಿವೆ. ಆದರೆ ೬೫೧೩೯೦ ಬಿಪಿಎಲ್ ಪಡೀತರ ಚೀಟಿ ಹಾಗೂ ೮೨೮೦೦ ಎಪಿಎಲ್ ಪಡೀತರ ಚೀಟಿ ವಿತರಣೆಯಾಗಿವೆ. ಇನ್ನೂ ೧೬ ಸಾವಿರ ಅರ್ಜಿ ವಿತರಣೆಗೆ ಬಾಕಿಯಿವೆ. ಕಳೆದ ವರ್ಷ ೬೯೦೦ ಪಡೀತರ ಚೀಟಿಗಳನ್ನು ರದ್ದು ಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕ ಮಂಟೆಸ್ವಾಮಿ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ ಸಚಿವರು ಕುಟುಂಬಗಳಿಗಿಂತ ಕಾರ್ಡ್‌ಗಳ ಸಂಖ್ಯೆಯೇ ಹೆಚ್ಚಿದೆ. ಬೋಗಸ್ ಕಾರ್ಡ್‌ಗಳಲಿಲ್ಲವೇ ಎಂದು ಕುಟುಕಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್, ಜಿಪಂ ಸಿಇಓ ಅನೀಸ್ ಕಣ್ಮಣಿ ಜಾಯ್, ಎಸ್‌ಪಿ ಡಾ.ದಿವ್ಯಾಗೋಪಿನಾಥ್, ಉಸ್ತುವಾರಿ ಸಚಿವರ ಕಾರ್ಯದರ್ಶಿ ಡಾ.ಕೆ.ಪಿ.ಮೋಹನ್‌ರಾಜ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


No comments:

Post a Comment

vishalaprabha 09-02-2019 pages